ನಿವಾಸಿ ಪ್ರಮಾಣಪತ್ರ ಆಂತರಿಕ ಭದ್ರತೆಗೆ ಧಕ್ಕೆ

ಲೋಕಬಂಧು ನ್ಯೂಸ್ ಉಡುಪಿ, ಜು.14
ರಾಜ್ಯ ಕಾಂಗ್ರೆಸ್ ಸರ್ಕಾರ ತನ್ನ ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ಕಾನೂನು ನಿಯಮಾವಳಿಗಳನ್ನು ಮೀರಿ ಸಂವಿಧಾನ ಬಾಹಿರವಾಗಿ ಅಕ್ರಮ ವಲಸಿಗರನ್ನು ರಕ್ಷಿಸಿ ಅವರನ್ನು ಮತದಾರರ ಪಟ್ಟಿಯಲ್ಲಿ ಮುಂದುವರಿಸಲು ಶಾಶ್ವತ ನಿವಾಸಿ ಪ್ರಮಾಣಪತ್ರ ನೀಡುವ ಮೂಲಕ ದೇಶದ ಅಂತರಿಕ ಭದ್ರತೆಗೆ ಧಕ್ಕೆ ತರಲು ಮುಂದಾಗಿದೆ ಎಂದು ಉಡುಪಿ ಶಾಸಕ ಯಶಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಬಾಂಗ್ಲಾ ದೇಶದ ಅಕ್ರಮ ವಲಸಿಗರಿಗೆ ಶಾಶ್ವತ ನಿವಾಸಿ ಪ್ರಮಾಣಪತ್ರ ಒದಗಿಸಿ ಮತದಾನದ ಹಕ್ಕು ನೀಡುವ ಮೂಲಕ ರಾಜಕೀಯ ಲಾಭ ಪಡೆದುಕೊಳ್ಳಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಾಗಿದೆ. 24 ವರ್ಷಗಳ ಬಳಿಕ ದೇಶದಾದ್ಯಂತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯ ಪ್ರಕ್ರಿಯೆಯನ್ನು ವಿಫಲಗೊಳಿಸಿ ಅಕ್ರಮ ವಲಸಿಗರು, ನುಸುಳುಕೋರರು, ದೇಶ ವಿರೋಧಿ ಶಕ್ತಿಗಳಿಗೆ ಆಶ್ರಯ ನೀಡಿ ಕರ್ನಾಟಕವನ್ನು ಭಯೋತ್ಪಾದಕರ ಸ್ವರ್ಗವಾಗಿದ್ದ ಹಿಂದಿನ ಕಾಶ್ಮೀರ ಮಾಡಲು ಹೊರಟಿದೆ.


ಮತದಾರ ಪಟ್ಟಿಯಿಂದ ಅನರ್ಹ ಮತದಾರರನ್ನು ಕೈಬಿಟ್ಟು ಪಾರದರ್ಶಕವಾಗಿ ಚುನಾವಣೆ ನಡೆಸಲು ಚುನಾವಣಾ ಆಯೋಗ ಎಸ್ಐಆರ್ ಪ್ರಕ್ರಿಯೆಯಿಂದ ಭಯಭೀತವಾಗಿರುವ ಕಾಂಗ್ರೆಸ್ ಪಕ್ಷ, ಇದೀಗ ಅನರ್ಹರಿಗೆ ಶಾಶ್ವತ ನಿವಾಸಿ ಪ್ರಮಾಣಪತ್ರ ನೀಡಿ ಪ್ರಜಾಪ್ರಭುತ್ವ ವ್ಯವಸ್ಥೆಯ ಕಗ್ಗೊಲೆಗೆ ಮುಂದಾಗಿದೆ.


ರಾಜ್ಯ ಸರ್ಕಾರದ ಈ ನಿರ್ಧಾರದಿಂದ ಕರ್ನಾಟಕ ರಾಜ್ಯ ಭಯೋತ್ಪಾದಕ, ರಾಷ್ಟ್ರ ವಿರೋಧಿ, ಮತಾಂಧ ಶಕ್ತಿಗಳ ಕೇಂದ್ರ ಸ್ಥಾನವಾಗಿ ಬದಲಾಗಲಿದ್ದು, ರಾಜ್ಯದ ಜನತೆ ಈಗಾಗಲೇ ಆತಂಕಗೊಂಡಿದ್ದರೂ ರಾಜ್ಯ ಸರಕಾರವೇ ದೇಶ ವಿರೋಧಿ ಶಕ್ತಿಗಳಿಗೆ ರತ್ನಗಂಬಳಿ ಹಾಸಿ ಸ್ವಾಗತಿಸಿ ಆಶ್ರಯ ನೀಡಲು ತುದಿಗಾಲಲ್ಲಿ ನಿಂತಿದೆ.


ಪಶ್ಚಿಮ ಬಂಗಾಳ ಸಹಿತ ವಿವಿಧ ರಾಜ್ಯಗಳಲ್ಲಿ ಎಸ್ಐಆರ್ ಪ್ರಕ್ರಿಯೆಯಿಂದ ಲಕ್ಷಾಂತರ ಮಂದಿ ಅನರ್ಹ ಮತದಾರರನ್ನು ಕೈಬಿಟ್ಟ ಬಳಿಕ ಉಂಟಾದ ರಾಜಕೀಯ ಬೆಳವಣಿಗೆಯ ಬಳಿಕ ಸದಾಕಾಲ ಮತಾಂಧ, ದೇಶ ವಿರೋಧಿ ಶಕ್ತಿಗಳನ್ನು ಓಲೈಕೆ ಮಾಡುವ ಕಾಂಗ್ರೆಸ್ ಪಕ್ಷಕ್ಕೆ ಆತಂಕ ತಂದಿದೆ.


ರಾಜ್ಯ ಸರ್ಕಾರ ತಕ್ಷಣ ಅನರ್ಹರಿಗೆ ಶಾಶ್ವತ ನಿವಾಸಿ ಪ್ರಮಾಣಪತ್ರ ನೀಡುವ ತನ್ನ ನಿರ್ಧಾರವನ್ನು ಕೈಬಿಡಬೇಕು. ದೇಶದ ಅಂತರಿಕ ಭದ್ರತೆಗೆ ಆತಂಕ ಸೃಷ್ಟಿಸಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯದ ಜನತೆ ಉಗ್ರ ಪ್ರತಿಭಟನೆಯ ಮೂಲಕ ತಕ್ಕ ಉತ್ತರ ನೀಡುವ ಸನ್ನಿವೇಶ ನಿರ್ಮಾಣವಾಗಲಿದೆ ಎಂದು ಶಾಸಕ ಯಶಪಾಲ್ ಸುವರ್ಣ ಎಚ್ಚರಿಕೆ ನೀಡಿದ್ದಾರೆ.