ಲೋಕಬಂಧು ನ್ಯೂಸ್ | ಮಣಿಪಾಲ, ಜು.7
ಇಲ್ಲಿನ ಕಸ್ತೂರ್ಬಾ ಆಸ್ಪತ್ರೆಯ ವೈದ್ಯರು ಅಪರೂಪದ, ಅತ್ಯಂತ ಸಂಕೀರ್ಣ ಮತ್ತು ಅತ್ಯಂತ ದೀರ್ಘಾವಧಿಯ ಶಸ್ತ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸಿದ್ದು, ರೋಗಿ ಚೇತರಿಸಿಕೊಂಡಿದ್ದಾರೆ.
ಸುಮಾರು ಒಂದು ತಿಂಗಳಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದ ಶಿವಮೊಗ್ಗದ 63 ವರ್ಷದ ರೋಗಿ ಆಸ್ಪತ್ರೆಗೆ ದಾಖಲಾಗಿದ್ದು, ಅವರನ್ನು ತಪಾಸಣೆಗೊಳಪಡಿಸಿದಾಗ ಅವರ ಎಡ ಮೂತ್ರಪಿಂಡದಲ್ಲಿ ದೊಡ್ಡ ಗಾತ್ರದ ಕ್ಯಾನ್ಸರ್ ಗಡ್ಡೆ ಇರುವುದನ್ನು ಪತ್ತೆಹಚ್ಚಲಾಯಿತು.
ಅದು ದೇಹದ ಅತಿದೊಡ್ಡ ರಕ್ತನಾಳವಾದ ವೆನಾಕ್ಯಾವಾ ಮೂಲಕ ಹರಡಿ ಹೃದಯದ ಬಲ ಹೃತ್ಕರ್ಣದ ವರೆಗೆ ತಲುಪಿತ್ತು.
ಮೂತ್ರಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಅರುಣ್ ಚಾವ್ಲಾ ನೇತೃತ್ವದಲ್ಲಿ ಹೃದಯ, ಎದೆ ಮತ್ತು ರಕ್ತನಾಳಗಳ ಶಸ್ತ್ರಚಿಕಿತ್ಸೆ ವಿಭಾಗದ ತಜ್ಞರು ಸಮನ್ವಯತೆಯಿಂದ ಶಸ್ತ್ರಚಿಕಿತ್ಸೆಯ ಸಮಗ್ರ ಯೋಜನೆ ರೂಪಿಸಿದರು. ರೋಗಿ ಮಧುಮೇಹ, ಅಧಿಕ ರಕ್ತದೊತ್ತಡ, ಥೈರಾಯ್ಡ್ ಸಮಸ್ಯೆ ಹಾಗೂ ಸೌಮ್ಯ ಹೃದಯ ಕಾಯಿಲೆಯಿಂದ ಬಳಲುತ್ತಿದ್ದರು. ಆದ್ದರಿಂದ ಮೊದಲು ಹೃದಯಶಾಸ್ತ್ರ ಮತ್ತು ಎಂಡೋಕ್ರಿನೊಲೊಜಿ ವಿಭಾಗಗಳ ತಜ್ಞರು ಅವರ ಸ್ಥಿತಿಮೌಲ್ಯಮಾಪನ ಮಾಡಿ, ಶಸ್ತ್ರಚಿಕಿತ್ಸೆಗೆ ಸೂಕ್ತವಾಗುವಂತೆ ಚಿಕಿತ್ಸೆ ನೀಡಿದರು.
ನಂತರ ಮೊದಲ ಹಂತದಲ್ಲಿ ಮೂತ್ರಶಾಸ್ತ್ರ ತಜ್ಞರು ಕ್ಯಾನ್ಸರ್ ಪೀಡಿತ ಮೂತ್ರಪಿಂಡ ತೆರವುಗೊಳಿಸಿದರು. ಬಳಿಕ ಎದೆ- ಹೃದಯ ತಜ್ಞರು ಎದೆ ತೆರೆದು ರೋಗಿಯನ್ನು ತಾತ್ಕಾಲಿಕ ಹೃದಯ- ಶ್ವಾಸಕೋಶ ಯಂತ್ರಕ್ಕೆ ಸಂಪರ್ಕಿಸಿ ಮೆದುಳು ಸೇರಿದಂತೆ ಪ್ರಮುಖ ಅಂಗಗಳನ್ನು ರಕ್ಷಿಸುವುದಕ್ಕಾಗಿ ರೋಗಿಯ ದೇಹದ ಉಷ್ಣತೆಯನ್ನು 22 ಡಿಗ್ರಿ ಸೆಲ್ಸಿಯಸ್'ಗೆ ಇಳಿಸಲಾಯಿತು. ರಕ್ತದ ಪರಿಚಲನೆ ಕೆಲಕಾಲ ಸಂಪೂರ್ಣ ಸ್ಥಗಿತಗೊಳಿಸಲಾಯಿತು.
ಹೃದಯದ ಬಲ ಹೃತ್ಕರ್ಣ ಹಾಗೂ ಕೆಳಗಿನ ವೆನಾಕ್ಯಾವಗಳನ್ನು ಏಕಕಾಲದಲ್ಲಿ ತೆರೆದು ಸುರಕ್ಷಿತವಾಗಿ ಗಡ್ಡೆಯನ್ನು ತೆರವುಗೊಳಿಸಲಾಯಿತು.
ಶಸ್ತ್ರಚಿಕಿತ್ಸೆ ನಂತರ ತೀವ್ರ ನಿಗಾ ಆರೈಕೆ ಬಳಿಕ ಮೂರು ದಿನದಲ್ಲಿ ರೋಗಿ ನಡೆಯುವಷ್ಟು ಚೇತರಿಸಿಕೊಂಡರು. ಎರಡು ವಾರಗಳ ಬಳಿಕ ಆರೋಗ್ಯ ಸ್ಥಿರಗೊಂಡ ನಂತರ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.
ಈ ಸಂಕೀರ್ಣ ಶಸ್ತ್ರಚಿಕಿತ್ಸೆಗೆ ಹೃದಯ ಎದೆ ಮತ್ತು ರಕ್ತನಾಳಗಳ ಶಸ್ತ್ರಚಿಕಿತ್ಸಾ ತಜ್ಞರಾದ ಡಾ.ಶ್ಯಾಮ್ ಕೆ. ಹಾಗೂ ಡಾ.ಗಣೇಶ್ ಕಾಮತ್, ಮೂತ್ರಶಾಸ್ತ್ರ ತಜ್ಞರಾದ ಡಾ.ಅರುಣ್ ಚಾವ್ಲಾ ಹಾಗೂ ಡಾ.ಜಿ.ವಿ. ಶ್ರೀನಾಥ್ ಪ್ರಮುಖ ಪಾತ್ರ ವಹಿಸಿದರು. ಅರಿವಳಿಕೆ ತಜ್ಞರಾದ ಡಾ.ವಿಜಯ್ ಕುಮಾರ್, ಡಾ.ಸಾಯಿಕೃಷ್ಣ ನೆರವು ನೀಡಿದರು.

