ಲೋಕಬಂಧು ನ್ಯೂಸ್ | ಮಲ್ಪೆ. ಜು.8
ಮಲ್ಪೆ ಮೀನುಗಾರರ ಸಂಘದ ಸಭಾಭವನದಲ್ಲಿ ಮಲ್ಪೆ ಮೀನುಗಾರಿಕಾ ಬಂದರಿನ ಸಮಗ್ರ ನಿರ್ವಹಣೆ ಮತ್ತು ಅಭಿವೃದ್ಧಿ ಯೋಜನೆಗಳ ಬಗ್ಗೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಮೀನುಗಾರ ಸಂಘದ ಪ್ರಮುಖರೊಂದಿಗೆ ಶಾಸಕ ಯಶಪಾಲ್ ಸುವರ್ಣ ಬುಧವಾರ ಸಭೆ ನಡೆಸಿದರು.
ಮಲ್ಪೆ ಮೀನುಗಾರಿಕಾ ಬಂದರಿನ ಅವ್ಯವಸ್ಥೆ ಹಾಗೂ ನಿರ್ವಹಣೆಯಲ್ಲಿ ಇಲಾಖೆಯ ನಿರ್ಲಕ್ಷ್ಯದ ಬಗ್ಗೆ ಮೀನುಗಾರರಿಂದ ವ್ಯಾಪಕ ದೂರು ಬರುತ್ತಿದ್ದು, ಮಾಧ್ಯಮಗಳಲ್ಲಿಯೂ ಸಮಸ್ಯೆ ಬಗ್ಗೆ ವರದಿಯಾಗುತ್ತಿದೆ. ಮೀನುಗಾರಿಕೆ ಹಾಗೂ ಬಂದರು ಇಲಾಖೆ ಅಧಿಕಾರಿಗಳು ಬಂದರು ನಿರ್ವಹಣೆ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಬಂದರು ನಿರ್ವಹಣೆಯ ಟೆಂಡರ್ ಅವಧಿ ಮುಗಿದಿದ್ದರೂ ಈವರೆಗೆ ಹೊಸ ಟೆಂಡರ್ ಕರೆದಿಲ್ಲ. ಬಂದರಿನ ಸ್ವಚ್ಚತೆ, ಬೀದಿದೀಪ ಕೊರತೆ, ಭದ್ರತೆ ದೃಷ್ಟಿಯಲ್ಲಿ ಗುಣಮಟ್ಟದ ಸಿಸಿ ಟಿವಿ ಅಳವಡಿಕೆ ಬಗ್ಗೆ ಈ ಹಿಂದೆಯೇ ಸೂಚಿಸಲಾಗಿದ್ದರೂ ಈವರೆಗೆ ಕೈಗೊಂಡಿಲ್ಲ. ಬಂದರು ಇಲಾಖೆಯ ಜಾಗವನ್ನು ಮೀನುಗಾರಿಕೆ ಉದ್ದೇಶಕ್ಕೆ ಮಾತ್ರ ಮಂಜೂರು ಮಾಡಬೇಕು ಎಂದು ಈ ಹಿಂದೆಯೇ ಸಭೆಯಲ್ಲಿ ನಿರ್ಣಯಿಸಿದ್ದರೂ ಇತರ ಉದ್ದೇಶಗಳಿಗೆ ಖಾಸಗಿ ವ್ಯಕ್ತಿಗಳಿಗೆ ನಿಯಮ ಮೀರಿ ಟೆಂಡರ್ ಪ್ರಕ್ರಿಯೆ ನಡೆಸದೆ ನೀಡುತ್ತಿರುವ ಬಗ್ಗೆ ಮೀನುಗಾರ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿ, ಮುಂದಿನ ದಿನಗಳಲ್ಲಿ ಈ ಬಗ್ಗೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದರು.
ಮಲ್ಪೆ ಬಂದರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿದ್ದು, ಬಂದರು ಇಲಾಖೆಯ ಮೂಲಕ ನಿರ್ಮಾಣಗೊಳ್ಳಲಿರುವ ನೂತನ ಪ್ರವೇಶ ದ್ವಾರದ ವಿನ್ಯಾಸವನ್ನು ತಕ್ಷಣ ಅಂತಿಮಗೊಳಿಸಿ ಮೀನುಗಾರಿಕಾ ಋತುವಿನ ಆರಂಭಕ್ಕೂ ಮುನ್ನ ಕಾಮಗಾರಿ ಪೂರ್ಣಗೊಳಿಸುವಂತೆ ಹಾಗೂ ಹೆದ್ದಾರಿ ಕಾಮಗಾರಿಗೆ ಈಗಾಗಲೇ ಗುರುತಿಸಿರುವ ಬಂದರು ಇಲಾಖೆಯ ಜಾಗದಲ್ಲಿರುವ ಕಟ್ಟಡಗಳನ್ನು ತಕ್ಷಣ ತೆರವುಗೊಳಿಸಿ ಶೀಘ್ರ ಕಾಮಗಾರಿ ಪೂರ್ಣಗೊಳಿಸುವಂತೆ ಇಲಾಖೆ ಅಧಿಕಾರಿಗಳಿಗೆ ಶಾಸಕ ಯಶಪಾಲ್ ಸುವರ್ಣ ಸೂಚಿಸಿದರು.
ಮೀನುಗಾರಿಕಾ ಇಲಾಖೆ ಮೂಲಕ ಬಾಪುಟೋಟದಲ್ಲಿ ನಿರ್ಮಾಣಗೊಂಡಿರುವ ಶೌಚಾಲಯ ಸೂಕ್ತ ನಿರ್ವಹಣೆ ಇಲ್ಲದೆ ಮೀನುಗಾರರ ಉಪಯೋಗಕ್ಕೆ ಇಲ್ಲದಂತಾಗಿದ್ದು, ತಕ್ಷಣ ಮಲ್ಪೆ ಮೀನುಗಾರರ ಸಂಘದ ಸಲಹೆಯಂತೆ ಸ್ಥಳೀಯ ಸಹಕಾರಿ ಸಂಸ್ಥೆಗೆ ನಿರ್ವಹಣೆಗೆ ನೀಡಿ ಶೌಚಾಲಯ ಸಾರ್ವಜನಿಕ ಬಳಕೆಗೆ ನೀಡುವಂತೆ ತಿಳಿಸಿದರು.
ತುರ್ತು ಸಂದರ್ಭದಲ್ಲಿ ತಕ್ಷಣ ಸೇವೆಗೆ ಮಲ್ಪೆ ಬಂದರಿನ ಅಗ್ನಿಶಾಮಕ ದಳ ಸನ್ನದ್ಧವಾಗಿರುವಂತೆ ಹಾಗೂ ಅಗತ್ಯ ವಾಹನಗಳ ಬಗ್ಗೆ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದ ಶಾಸಕರು, ಈಗಾಗಲೇ ಕರಾವಳಿ ಭಾಗದ ಮಲ್ಪೆ, ತೊಟ್ಟಂ ಹಾಗೂ ಗುಜ್ಜರಬೆಟ್ಟು ಭಾಗದ ಕಡಲ್ಕೊರೆತ ಪೀಡಿತ ಪ್ರದೇಶಗಳಲ್ಲಿ ತಕ್ಷಣ ಕಾಮಗಾರಿ ಪ್ರಾರಂಭಿಸುವಂತೆ ತಿಳಿಸಿದರು.
ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ ಹಾಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮೀನುಗಾರಿಕಾ ಯೋಜನೆಗಳ ಬಗ್ಗೆ ಮೀನುಗಾರರಿಗೆ ಸಮರ್ಪಕ ಮಾಹಿತಿ ನೀಡಲು ಆದ್ಯತೆ ನೀಡುವಂತೆ ಹೇಳಿದರು.
ಈ ಸಂದರ್ಭದಲ್ಲಿ ಮಲ್ಪೆ ಮೀನುಗಾರ ಸಂಘದ ಅಧ್ಯಕ್ಷ ನಾರಾಯಣ ಕರ್ಕೇರ, ನಿಕಟಪೂರ್ವ ಅಧ್ಯಕ್ಷ ದಯಾನಂದ ಸುವರ್ಣ, ಕಾರ್ಯದರ್ಶಿ ಜಗನ್ನಾಥ ಕಡೆಕಾರು, ಮೀನುಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಕುಮಾರಸ್ವಾಮಿ, ಇಲಾಖೆಯ ಅಧಿಕಾರಿಗಳಾದ ಸವಿತಾ ಖಾದ್ರಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಮೀನುಗಾರರ ಸಂಘದ ಪದಾಧಿಕಾರಿಗಳು ಹಾಗೂ ಮೀನುಗಾರ ಮುಖಂಡರು ಉಪಸ್ಥಿತರಿದ್ದರು.
.jpg)
.jpg)