ಲೋಕಬಂಧು ನ್ಯೂಸ್ | ಉಡುಪಿ, ಜು.6
ಉಡುಪಿ ಪತ್ರಿಕಾ ಭವನ ಸಮಿತಿಯ ವಾರ್ಷಿಕ ಮಹಾಸಭೆ ಹಾಗೂ ನೂತನ ಸಮಿತಿಗೆ ಅಧಿಕಾರ ಹಸ್ತಾಂತರ ಕಾರ್ಯಕ್ರಮ ಸಮಿತಿಯ ನಿಕಟಪೂರ್ವ ಸಂಚಾಲಕ ಅಜಿತ್ ಆರಾಡಿ ಅಧ್ಯಕ್ಷತೆಯಲ್ಲಿ ಸೋಮವಾರ ಪತ್ರಿಕಾ ಭವನದಲ್ಲಿ ನಡೆಯಿತು.
2024-2025 ಹಾಗೂ 2025-2026 ನೇ ಸಾಲಿನ ಲೆಕ್ಕಪತ್ರವನ್ನು ಅವರು ಸಭೆಯ ಮುಂದಿಟ್ಟರು. ಲೆಕ್ಕಪರಿಶೋಧಕರಿಂದ ಪರಿಶೋಧನೆಗೆ ಒಳಪಟ್ಟಿರುವ ವರದಿಯನ್ನು ಸದಸ್ಯರು ಸರ್ವಾನುಮತದಿಂದ ಅಂಗೀಕರಿಸಿದರು.
2022ರ ಅಕ್ಟೋಬರ್ 19ರಂದು ಉಡುಪಿ ಜಿಲ್ಲಾ ಸಂಘದ ನೇತೃತ್ವದಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿದ್ದ ಉಡುಪಿ ಪತ್ರಿಕಾ ಭವನ ಸಮಿತಿ 2022ರ ನವೆಂಬರ್ 1ರಿಂದ ಜವಾಬ್ದಾರಿ ವಹಿಸಿಕೊಂಡಿತ್ತು. ಸಮಿತಿ ತನ್ನ 3 ವರ್ಷದ ಅವಧಿಯಲ್ಲಿ ಭವನದಲ್ಲಿ ಹಾಗೂ ಪತ್ರಕರ್ತರ ಅನುಕೂಲಕ್ಕೆ ಮಾಡಿರುವ ಹೊಸ ಯೋಜನೆ, ಅಭಿವೃದ್ಧಿ ಕಾರ್ಯ, ಆರೋಗ್ಯ ನಿಧಿ ಬಗ್ಗೆ ವರದಿ ಮಂಡಿಸಲಾಯಿತು.
ಬ್ಯಾಂಕ್ ಖಾತೆಯಲ್ಲಿ ಜಮೆ ಮಾಡಿರುವ ಆದಾಯದ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಲಾಯಿತು. ಈ ಹಣವನ್ನು ಉಡುಪಿ ನಗರದಲ್ಲಿ ಕಾರ್ಯನಿರ್ವಹಿಸುವ ನಗರದ ಪತ್ರಕರ್ತರಿಗೆ ಮಾತ್ರವೇ ವಿನಿಯೋಗಿಸುವ ಬಗ್ಗೆ ನಿರ್ಣಯ ಮಾಡಲಾಯಿತು.
ಪತ್ರಿಕಾ ಭವನದ ಲೆಕ್ಕಾಚಾರವನ್ನು ಯಥಾವತ್ತಾಗಿ ಅತ್ಯಂತ ಪಾರದರ್ಶಕವಾಗಿ ಮಂಡಿಸಿದ ನಿಕಟಪೂರ್ವ ಸಂಚಾಲಕ ಅಜಿತ್ ಆರಾಡಿ ಅವರನ್ನು ಉಡುಪಿ ಜಿಲ್ಲಾ ಸಂಘ ಹಾಗೂ ಪತ್ರಿಕಾ ಭವನ ವತಿಯಿಂದ ಸನ್ಮಾನಿಸಲಾಯಿತು.
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸುಜಿ ಕುರ್ಯ, ಸಂಘದ ರಾಜ್ಯ ಸಮಿತಿ ಸದಸ್ಯ ಆಸ್ಟ್ರೋ ಮೋಹನ್, ಪತ್ರಿಕಾ ಭವನ ಸಮಿತಿ ಸಂಚಾಲಕ ಅಂಕಿತ್ ಶೆಟ್ಟಿ ಮಾತನಾಡಿದರು.
ಹಿರಿಯ ಪತ್ರಕರ್ತರಾದ ರಾಜು ಖಾರ್ವಿ, ಉಮೇಶ್ ಮಾರ್ಪಳ್ಳಿ, ಗೋಪಾಲಕೃಷ್ಣ ಪಾದೂರು ಅವರು ಉಡುಪಿ ಪತ್ರಿಕಾ ಭವನ ಸಮಿತಿ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ, ಮೆಚ್ಚುಗೆಯ ಮಾತುಗಳನ್ನಾಡಿದರು.
ಇದೇ ಸಂದರ್ಭದಲ್ಲಿ ಅಂಕಿತ್ ಶೆಟ್ಟಿ ಸಂಚಾಲಕತ್ವದ ಹೊಸ ಸಮಿತಿಗೆ ಅಧಿಕಾರ ಹಸ್ತಾಂತರಿಸಲಾಯಿತು.


