ನನ್ನ ಹಾಗೂ‌ ಮೋದಿ ಸಂಬಂಧ ರಾಜ್ಯಸಭಾ ಸ್ಥಾನಕ್ಕೆ ಸೀಮಿತವಾಗಿಲ್ಲ

ಲೋಕಬಂಧು ನ್ಯೂಸ್ | ಬೆಂಗಳೂರು, ಜೂ.10
ತಮ್ಮ ರಾಜ್ಯಸಭಾ ಅವಧಿ ಜೂ.25ರಂದು ಪೂರ್ಣಗೊಳ್ಳಲಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ತಮ್ಮ ಸಂಬಂಧ ರಾಜ್ಯಸಭೆ ಸ್ಥಾನಕ್ಕೆ ಮಾತ್ರ ಸೀಮಿತವಾಗಿಲ್ಲ, ಕಳೆದ ಹತ್ತು ವರ್ಷಗಳಲ್ಲಿ ಬೆಳೆದ ವೈಯಕ್ತಿಕ ಬಾಂಧವ್ಯದ ಆಧಾರದ ಮೇಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ತಮ್ಮ ಮರುನಾಮನಿರ್ದೇಶನಕ್ಕಾಗಿ ತಾವು ಯಾವುದೇ ಮನವಿ ಮಾಡಿಲ್ಲ ಎಂದೂ ಅವರು ತಿಳಿಸಿದ್ದಾರೆ.
ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 2014ರಿಂದ ನಾನು ಮೋದಿ ಅವರೊಂದಿಗೆ ಉತ್ತಮ ಸಂಬಂಧ ಬೆಳೆಸಿಕೊಂಡಿದ್ದೇನೆ. ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಗೋಧ್ರಾ ಘಟನೆಯ ವಿಚಾರದಲ್ಲಿ ನಾನು ಮತ್ತು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಮೋದಿ ಅವರನ್ನು ಟೀಕಿಸಿದ್ದೆವು. ಆದರೆ, ಒಂದು ರಾಜ್ಯಸಭೆ ಸ್ಥಾನಕ್ಕಾಗಿ ಪ್ರಧಾನಿಯವರೊಂದಿಗಿನ ನನ್ನ ಸಂಬಂಧ ಕೊನೆಗೊಳ್ಳುವುದಿಲ್ಲ ಎಂದು ಆರು ದಶಕಗಳಿಗೂ ಹೆಚ್ಚು ಕಾಲ ರಾಜಕೀಯದಲ್ಲಿ ಸಕ್ರಿಯರಾಗಿರುವ ದೇವೇಗೌಡ ಹೇಳಿದರು.


ತಾವು ರಾಜ್ಯಸಭಾ ಸದಸ್ಯನಾಗಿರುವುದಿಲ್ಲ ಎಂಬ ಕಾರಣಕ್ಕೆ ಇನ್ನು ಮುಂದೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ತಮ್ಮ ಸಂಬಂಧಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ ಎಂದವರು ಸ್ಪಷ್ಟಪಡಿಸಿದ್ದಾರೆ.


ಕಾಂಗ್ರೆಸ್ ಪಕ್ಷಕ್ಕೆ ಪರೋಕ್ಷವಾಗಿ ತಿರುಗೇಟು ನೀಡಿದ ದೇವೇಗೌಡ, ಒಂದು ರಾಜ್ಯಸಭೆ ಸ್ಥಾನಕ್ಕಾಗಿ ತನ್ನ ಮತ್ತು ಮೋದಿ ನಡುವಿನ ಸಂಬಂಧ ಹದಗೆಡುತ್ತದೆ ಎಂದು ಕಾಂಗ್ರೆಸ್ ಭಾವಿಸಿದ್ದರೆ ಅದು ತಪ್ಪು ಕಲ್ಪನೆ. ದೇಶದಲ್ಲಷ್ಟೇ ಅಲ್ಲ, ವಿದೇಶಗಳಲ್ಲಿಯೂ ಮೋದಿ ಅವರ ನಾಯಕತ್ವಕ್ಕೆ ಅಪಾರ ಗೌರವವಿದೆ ಎಂದವರು ಹೇಳಿದರು.


ಕಳೆದ ಹತ್ತು ವರ್ಷಗಳಲ್ಲಿ ಮೋದಿ ಅವರೊಂದಿಗಿನ ನನ್ನ ಸಂಬಂಧ ಕೇವಲ ಒಂದು ರಾಜ್ಯಸಭೆ ಸ್ಥಾನಕ್ಕಾಗಿ ಬೆಳೆದದ್ದಲ್ಲ. ಅದು ನಮ್ಮಿಬ್ಬರ ನಡುವಿನ ವೈಯಕ್ತಿಕ ಬಾಂಧವ್ಯ. ನಾನು ರಾಜ್ಯಸಭೆಯ ಸದಸ್ಯನಾಗಿರದಿದ್ದರೂ ಆ ಸಂಬಂಧ ಮುಂದುವರಿಯುತ್ತದೆ. ಈ ದೇಶದಲ್ಲಿ ಯಾವುದೇ ಸಂದರ್ಭ ಬಂದರೂ ಮೋದಿ ಅಥವಾ ಅವರ ಆಡಳಿತದ ಬಗ್ಗೆ ನನ್ನ ಭಾವನೆಗಳನ್ನು ನಾನು ನಿರ್ಭಯವಾಗಿ ವ್ಯಕ್ತಪಡಿಸಿದ್ದೇನೆ. ಕುಮಾರಸ್ವಾಮಿ ಸರ್ಕಾರ ಇಲ್ಲಿ ಪತನಗೊಂಡಾಗ ಬಿಜೆಪಿಯೊಂದಿಗೆ ಕೈಜೋಡಿಸಬೇಕು ಎಂದು ನಾನು ಹೇಳಿದ್ದೆ. ಇದು ಯಾರಿಗೂ ಗೊತ್ತಿಲ್ಲದ ವಿಷಯವಲ್ಲ ಎಂದರು.


ಎಲ್ಲ ಸಂದರ್ಭಗಳಲ್ಲಿಯೂ ನಾನು ಮೋದಿ ಅವರೊಂದಿಗೆ ನಿಂತಿದ್ದೇನೆ. ಕಳೆದ ಹತ್ತು ವರ್ಷಗಳಲ್ಲಿ ದೇಶದ ಸರ್ವಾಂಗೀಣ ಅಭಿವೃದ್ಧಿಗಾಗಿ ಅವರು ಮಾಡಿದ ಕೆಲಸಗಳನ್ನು ನಾನು ಬೆಂಬಲಿಸಿದ್ದೇನೆ. ಭಾರತ 145 ಕೋಟಿ ಜನಸಂಖ್ಯೆಯ ವಿಶಾಲ ರಾಷ್ಟ್ರ. ನೇರವಾಗಿ ಹೇಳುವುದಾದರೆ ಇಂಡಿಯಾ ಮೈತ್ರಿಕೂಟದಲ್ಲಿ ಮೋದಿ ಅವರಿಗೆ ಸಮಾನವಾಗಿ ಸ್ಪರ್ಧಿಸಬಲ್ಲ ಮತ್ತೊಬ್ಬ ನಾಯಕ ನನಗೆ ಕಾಣುತ್ತಿಲ್ಲ ಎಂದು ದೇವೇಗೌಡ ಅಭಿಪ್ರಾಯಪಟ್ಟರು.


ದೇಶದ ಒಟ್ಟಾರೆ ಅಭಿವೃದ್ಧಿಯ ಜೊತೆಗೆ ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯತ್ತ ಕೊಂಡೊಯ್ಯುವ ಗುರಿಯನ್ನು ಮೋದಿ ಹೊಂದಿದ್ದಾರೆ. ನಮ್ಮ ರಕ್ಷಣಾ ಸಾಮರ್ಥ್ಯವೂ ಬಹಳಷ್ಟು ಹೆಚ್ಚಾಗಿದೆ. ಇಂಥ ಅನೇಕ ಸಾಧನೆಗಳನ್ನು ಹೇಳಬಹುದು ಎಂದರು.


ಇಂದು ಮೋದಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ನಾಯಕ. ದೇಶದಲ್ಲಷ್ಟೇ ಅಲ್ಲ, ಜಾಗತಿಕ ಮಟ್ಟದಲ್ಲಿಯೂ ಅವರಿಗೆ ವಿಶೇಷ ಸ್ಥಾನವಿದೆ. ಆ ಮಟ್ಟಕ್ಕೆ ಬೆಳೆದಿರುವ ಮತ್ತೊಬ್ಬ ನಾಯಕ ಇಲ್ಲ ಎಂದು ದೇವೇಗೌಡ ಅವರು ಪ್ರಧಾನಿ ಮೋದಿ ಅವರನ್ನು ಶ್ಲಾಘಿಸಿದರು.