ಲೋಕಬಂಧು ನ್ಯೂಸ್ ಉಡುಪಿ, ಜು.25
ವೃತ್ತಿಯಲ್ಲಿ ಸ್ವರ್ಣೋದ್ಯಮಿಯಾಗಿ ರಾಷ್ಟ್ರೀಯತೆಯನ್ನು ಮೈಗೂಡಿಸಿಕೊಂಡು ಸಮಾಜ ಋಣ ತೀರಿಸಿದ ಧೀಮಂತ ಗುಜ್ಜಾಡಿ ನರಸಿಂಹ ನಾಯಕ್ ಎಂಬುದಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹಕಾರ್ಯವಾಹ ದತ್ತಾತ್ತೇಯ ಹೊಸಬಾಳೆ ಬಣ್ಣಿಸಿದರು.ಇಲ್ಲಿನ ಗುಜ್ಜಾಡಿ ಸ್ವರ್ಣೋದ್ಯಮ ಆಶ್ರಯದಲ್ಲಿ ನಗರದ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ಶನಿವಾರ ನಡೆದ ಸ್ವರ್ಣ ಸಂಸ್ಥೆ ಸಂಸ್ಥಾಪಕ ಗುಜ್ಜಾಡಿ ನರಸಿಂಹ ನಾಯಕ್ ಜನ್ಮ ಶತಮಾನೋತ್ಸವ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಗೀತೆಯಲ್ಲಿ ಶ್ರೀಕೃಷ್ಣ ಬೋಧಿಸಿದಂತೆ ಜೀವನ ಸವೆಸಿದ ನರಸಿಂಹ ನಾಯಕ್, ಜೀವನದಲ್ಲಿ ಯಶಸ್ಸು ಸಾಧಿಸುವ ಜೊತೆಗೆ ಸಮಾಜದ ಅಭಿವೃದ್ಧಿಯಲ್ಲಿ ತೊಡಗುವ ಮೂಲಕ ಸಮಾಜ ಋಣ ತೀರಿಸಿದ್ದಾರೆ ಎಂದರು.ಬೆಂಗಳೂರಿನ ಲೆಕ್ಕಪರಿಶೋಧಕ ಕೆ.ಉಲ್ಲಾಸ್ ಕಾಮತ್, ವಿಶ್ವ ಹಿಂದೂ ಪರಿಷತ್'ನ ಎಂ.ಎನ್. ನಾಗರಾಜ್, ಎಓಜೆ ಪ್ರಧಾನ ಸಂಪಾದಕ ಸುಮೇಶ್ ವೇದ್ರಾ ಹಾಗೂ ಗುಜ್ಜಾಡಿ ಒಡನಾಡಿ ಬಾಲಕೃಷ್ಣ ಮಲ್ಯ ಮಾತನಾಡಿದರು.
ಈ ಸಂದರ್ಭದಲ್ಲಿ ಪತ್ರಕರ್ತ ಸತೀಶ ಮಲ್ಯ ಸಂಪಾದಿತ `ಗುಜ್ಜಾಡಿ ನರಸಿಂಹ ನಾಯಕ್' ಪುಸ್ತಕ ಬಿಡುಗಡೆಗೊಳಿಸಲಾಯಿತು.