ಲೋಕಬಂಧು ನ್ಯೂಸ್ ಉಡುಪಿ, ಏ.11
ನೆಲ್ಯಾಡಿ ಮೂಲದ ಸುದೀಪ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಅವರ ಪತ್ನಿ ಸೌಮ್ಯಳನ್ನು ಕಾರ್ಕಳ ನಗರ ಪೊಲೀಸರು ಬಂಧಿಸಿದ್ದಾರೆ.ಮೃತ ಸುದೀಪ್ ತಂದೆ ದಾಮೋದರ ಅವರು ನೀಡಿದ ದೂರಿನಂತೆ, ಕಾರ್ಕಳ ಕುಕ್ಕುಂದೂರು ಹಿಮ್ಮುಂಜೆ ಕಜೆ ವಾಸಿ ಸೌಮ್ಯ ಶೆಟ್ಟಿ 2026ರ ಫೆ.17ರಂದು ಪುತ್ತೂರು ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಮದುವೆಯಾಗಿದ್ದು, ಆ ಬಳಿಕ ಸುದೀಪ್ ಮತ್ತು ಸೌಮ್ಯ ಅವರು ಕಾರ್ಕಳ ಜೋಡುರಸ್ತೆಯ ಬಂಗ್ಲೆಗುಡ್ಡೆ ಕಜೆ ಎಂಬಲ್ಲಿ ವಾಸವಾಗಿದ್ದರು.
ಮಾ. 17ರಂದು ಸುದೀಪ್ ತನ್ನ ತಾಯಿಯೊಂದಿಗೆ ಕಡಬ ತಾಲೂಕಿನ ನೆಲ್ಯಾಡಿ ಪೇಟೆ ಸಮೀಪ ತಲುಪಿದಾಗ ಸೌಮ್ಯ ಸ್ಕೂಟಿ ಚಲಾಯಿಸಿಕೊಂಡು ಬಂದು ಕಾರಿಗೆ ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಬೈದು ಕೊಂದು ಹಾಕುವುದಾಗಿ ಜೀವ ಬೆದರಿಕೆ ಹಾಕಿದ್ದಳು.
ಬಳಿಕ ಸುದೀಪ್ ಕಾರ್ಕಳಕ್ಕೆ ಬಂದಿದ್ದು, ಮಾ.22ರಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಸೌಮ್ಯ ತನ್ನ ಸಂಬಂಧಿಕರಿಗೆ ದೂರವಾಣಿ ಕರೆ ಮಾಡಿ ತಿಳಿಸಿ, ನಿಟ್ಟೆ ಗಾಜ್ರಿಯಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿರುವುದಾಗಿ ತಿಳಿಸಿದ್ದು, ಮಾ.23ರಂದು ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಆದರ್ಶ ಆಸ್ಪತ್ರೆಗೆ, ಬಳಿಕ ಮಾ.24ರಂದು ಮಂಗಳೂರು ಯೆನಪೋಯ ಆಸ್ಪತ್ರೆಗೆ ದಾಖಲಿಸಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮಾ.29ರಂದು ಸುದೀಪ್ ಮೃತಪಟ್ಟಿದ್ದರು.
ಸೌಮ್ಯ ಮಾನಸಿಕ ಹಿಂಸೆ ನೀಡಿ ಆತ್ಮಹತ್ಯೆಗೆ ಪ್ರಚೋದಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಏ.1ರಂದು ಉಡುಪಿ ಜಿಲ್ಲಾ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಅವರು ಪ್ರಕರಣದ ತನಿಖೆಯನ್ನು ಕಾರ್ಕಳ ನಗರ ಪೊಲೀಸ್ ಠಾಣಾ ಪ್ರಭಾರ ಪೊಲೀಸ್ ನಿರೀಕ್ಷಕ ಮಂಜಪ್ಪ ಡಿ.ಆರ್. ಅವರಿಗೆ ವಹಿಸಿದ್ದು, ಪ್ರಕರಣದ ಸಾಕ್ಷ್ಯಧಾರ ಸಂಗ್ರಹಿಸಿ ಆರೋಪಿ ಸೌಮ್ಯ ಶೆಟ್ಟಿಯನ್ನು ಏ.4ರಂದು ಶನಿವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.