ಲೋಕಬಂಧು ನ್ಯೂಸ್ | ಬಾಗಲಕೋಟೆ, ಮೇ 4
ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಶಾಸಕ ದಿ. ಎಚ್.ವೈ. ಮೇಟಿ ಅವರ ಅಗಲಿಕೆಯಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಉಪಚುನಾವಣೆ ಕಾಂಗ್ರೆಸ್ ಹಾಗೂ ಬಿಜೆಪಿ ಪಾಲಿಗೆ ಪ್ರತಿಷ್ಠೆಯ ಕಣವಾಗಿತ್ತು. ಎರಡೂ ಪಕ್ಷಗಳ ಘಟಾನುಘಟಿಗಳು ಬಾಗಲಕೋಟೆಯಲ್ಲಿ ಮೊಕ್ಕಾಂ ಹೂಡಿದ್ದರು. ಕೊನೆಗೆ ಮತದಾರ ಕಾಂಗ್ರೆಸ್ ಪರವಾಗಿ ಒಲವು ತೋರಿರುವುದರಿಂದ ಉಮೇಶ ಮೇಟಿಗೆ ಭಾರೀ ಅಂತರದ ಗೆಲುವಾಗಿದೆ.
ಚುನಾವಣೆಯಲ್ಲಿ 8 ದಿನ ಬಾಗಲಕೋಟೆಯಲ್ಲೇ ಉಳಿದಿದ್ದ ಸಿಎಂ ಸಿದ್ದರಾಮಯ್ಯ ಸ್ವಜಾತಿಯ ತಮ್ಮ ಆಪ್ತರಾಗಿದ್ದ ಎಚ್.ವೈ. ಮೇಟಿ ಅವರ ಪುತ್ರ ಉಮೇಶ ಅವರನ್ನು ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆ ಕೂಡ ಗುಪ್ತಗಾಮಿನಿಯಾಗಿ ಕೆಲಸ ಮಾಡಿ ಗೆಲುವು ತಂದು ಕೊಟ್ಟಿದೆ ಎಂದು ವಿಶ್ಲೇಷಿಸಲಾಗುತ್ತಿದೆ.