ಲೋಕಬಂಧು ನ್ಯೂಸ್ ದಾವಣಗೆರೆ, ಮೇ 6
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆ ಪ್ರಕ್ರಿಯೆಯಲ್ಲಿ ಗಂಭೀರ ಅಕ್ರಮಗಳಾಗಿವೆ ಎಂಬ ಆರೋಪ ಕೇಳಿಬಂದಿದ್ದು, ಪರಾಜಿತ ಎಸ್ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಅವರು ರಾಜ್ಯ ಮತ್ತು ಕೇಂದ್ರ ಚುನಾವಣಾ ಆಯೋಗಗಳು ಸ್ವತಂತ್ರ ಸಂಸ್ಥೆ ಮೂಲಕ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತ ಎಣಿಕೆ ಕೇಂದ್ರದಲ್ಲಿದ್ದ ಸ್ಟ್ರಾಂಗ್ ರೂಮ್ಗಳ ಕೀಗಳು ನಾಪತ್ತೆಯಾಗಿರುವುದನ್ನು ತೀವ್ರವಾಗಿ ಖಂಡಿಸಿದರು.
ಅಧಿಕಾರಿಗಳ ಪ್ರಕಾರ ಮೂರು ಸ್ಟ್ರಾಂಗ್ ರೂಮ್ಗಳ ಕೀಗಳು ಸಿಗದೇ ಹೋಗಿದ್ದು, ಅವುಗಳನ್ನು ಸುತ್ತಿಗೆಯಿಂದ ಒಡೆದು ತೆರೆಯಲಾಗಿದೆ ಎನ್ನಲಾಗಿದೆ. ಇದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ ತಂದಂತಾಗಿದೆ ಎಂದವರು ಆರೋಪಿಸಿದರು.
ಸ್ಟ್ರಾಂಗ್ ರೂಮ್ ತೆರೆಯುವ ಸಂದರ್ಭದಲ್ಲಿ ಯಾವುದೇ ಅಭ್ಯರ್ಥಿಗಳಿಗೆ ಮಾಹಿತಿ ನೀಡಿಲ್ಲ. ಕೀಗಳು ಕಾಣೆಯಾಗಿದ್ದರೆ ಅಭ್ಯರ್ಥಿಗಳ ಸಮ್ಮುಖದಲ್ಲೇ ಬೀಗ ಒಡೆಯಬೇಕಾಗಿತ್ತು. ಆದರೆ, ಅದನ್ನು ಗುಪ್ತವಾಗಿ ನಡೆಸಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದವರು ಹೇಳಿದರು.
ಈ ಬೆಳವಣಿಗೆ ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯ ಕೊರತೆಯನ್ನು ತೋರಿಸುತ್ತದೆ. ಜೊತೆಗೆ, ಬಾಷಾನಗರ ಮತ್ತು ಆಜಾದ್ ನಗರ ಪ್ರದೇಶಗಳ ಕೆಲವು ಇವಿಎಂಗಳಲ್ಲಿ ತಾಂತ್ರಿಕ ದೋಷ ಉಂಟಾಗಿದೆ ಎಂದು ಹೇಳಿ ಅವುಗಳ ಮತ ಎಣಿಕೆಯನ್ನು ವಿಳಂಬಗೊಳಿಸಲಾಗಿದೆ ಎಂಬುದನ್ನೂ ಅವರು ಪ್ರಶ್ನಿಸಿದರು. ಮೂರು ಇವಿಎಂಗಳಲ್ಲಿ ತಾಂತ್ರಿಕ ದೋಷದ ನೆಪದಲ್ಲಿ ಎಣಿಕೆ ವಿಳಂಬ ಮಾಡಲಾಗಿದೆ. ಅದರಲ್ಲಿ ಅಕ್ರಮದ ವಾಸನೆ ಇದೆ ಎಂದು ಆರೋಪಿಸಿದರು.
ಈ ಎಲ್ಲಾ ಬೆಳವಣಿಗೆಗಳು ಚುನಾವಣಾ ಪ್ರಕ್ರಿಯೆಯ ವಿಶ್ವಾಸಾರ್ಹತೆಯ ಮೇಲೆ ಪ್ರಶ್ನೆಗಳು ಎದ್ದಿವೆ. ಹಾಗಾಗಿ ರಾಜ್ಯ ಚುನಾವಣಾ ಆಯೋಗ ಮತ್ತು ಕೇಂದ್ರ ಚುನಾವಣಾ ಆಯೋಗ ಕೂಡಲೇ ಮಧ್ಯಪ್ರವೇಶಿಸಿ ಸ್ವತಂತ್ರ ತನಿಖಾ ಸಂಸ್ಥೆ ಮೂಲಕ ಕೂಲಂಕಷ ತನಿಖೆ ನಡೆಸಬೇಕು ಎಂದು ಅಫ್ಸರ್ ಕೊಡ್ಲಿಪೇಟೆ ಒತ್ತಾಯಿಸಿದರು.