ಲೋಕಬಂಧು ನ್ಯೂಸ್ | ಉಡುಪಿ, ಮೇ 19
ಯಾಗ, ದಾನ ಮತ್ತು ತಪಸ್ಸು ಇವು ಮೂರು ಕೂಡಾ ಭಗವಂತನ ಅನುಸಂಧಾನಕ್ಕೆ ಸರಿಯಾದ ಹಾದಿ. ಆದರೆ, ಅವುಗಳಲ್ಲಿ ಶ್ರೇಷ್ಠವಾದುದು ಸಾತ್ವಿಕವಾದ ಯಾಗ, ದಾನ ಮತ್ತು ಜ್ಞಾನ. ಇವು ಮೂರಕ್ಕೂ ಅನುಕೂಲವಾಗುವಂತೆ ಪ್ರಸಾದ್ ರಾಜ್ ಕಾಂಚನ್ ಅವರು ಮಹಾರುದ್ರ ಯಾಗವನ್ನು ಆಯೋಜಿಸಿದ್ದಾರೆ. ಅದು ಸಾತ್ವಿಕವಾಗಿದ್ದು, ಅದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಒಡಿಯೂರು ಗುರುದೇವದತ್ತ ಸಂಸ್ಥಾನದ ಗುರು ದೇವಾನಂದ ಸ್ವಾಮೀಜಿ ಹೇಳಿದರು.
ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಪ್ರಸಾದ್ರಾಜ್ ಕಾಂಚನ್ ಅವರ ನೇತೃತ್ವದಲ್ಲಿ ಲೋಕ ಕಲ್ಯಾಣಾರ್ಥವಾಗಿ ನಡೆಯುತ್ತಿರುವ ಮಹಾರುದ್ರ ಯಾಗದ ನಾಲ್ಕನೇ ದಿನದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸೋಮವಾರ ಆಶೀರ್ವಚನ ನೀಡಿದರು.
ಸಂಬಂಧಗಳು ವ್ಯವಹಾರಗಳಿಗೆ ಸೀಮಿತವಾದರೆ ಅದು ವ್ಯಾಪಾರವಾಗುತ್ತದೆ. ಅದರಿಂದ ಲೌಕಿಕವಾಗಿ ಬೆಳೆಯಬಹುದೇ ಹೊರತು ಉನ್ನತಿ ಸಾಧ್ಯವಿಲ್ಲ. ಸಂಬಂಧಗಳು ಸರ್ವರ ಹಿತ ಬಯಸಿದರೆ ಅದು ಸಂಸ್ಕಾರವಾಗುತ್ತದೆ. ಪ್ರಸಾದ್ ರಾಜ್ ಕಾಂಚನ್ ಅವರು ಸಮಾಜಕ್ಕೆ ಏನಾದರೂ ನೀಡಬೇಕೆಂಬ ದೊಡ್ಡ ಮನಸ್ಸಿನಿಂದ ಈ ಸಂಕಲ್ಪ ಮಾಡಿದ್ದಾರೆ ಎಂದು ಹಾರೈಸಿದರು.
ಮಹಾರುದ್ರ ಯಾಗದ ಕಾರ್ಯಾಧ್ಯಕ್ಷ ಪ್ರಸಾದ್ ರಾಜ್ ಕಾಂಚನ್ ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಶಾಸಕ ಕೆ. ರಘುಪತಿ ಭಟ್, ಉದ್ಯಮಿ ಸಾಧು ಸಾಲಿಯಾನ್, ಜಿ.ಪಂ. ಮಾಜಿ ಅಧ್ಯಕ್ಷ ಕೇಶವ ಕುಂದರ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಬ್ರಹ್ಮಾವರ ತಾಲೂಕು ಅಧ್ಯಕ್ಷೆ ಡಾ. ಸುನೀತಾ ಶೆಟ್ಟಿ, ಮಹಿಳಾ ಕಾಂಗ್ರೆಸ್ ಉಡುಪಿ ಬ್ಲಾಕ್ ಅಧ್ಯಕ್ಷೆ ಮಮತಾ ಶೆಟ್ಟಿ, ಮಲ್ಪೆ ಅಯ್ಯಪ್ಪ ಸ್ವಾಮಿ ಮಂದಿರ ಅಧ್ಯಕ್ಷ ಧನಂಜಯ ಕಾಂಚನ್, ಏಳೂರು ಮೊಗವೀರ ಮಹಾಜನ ಸಂಘದ ಅಧ್ಯಕ್ಷ ರತ್ನಾಕರ ಸಾಲಿಯಾನ್, ರಘುರಾಮ್ ಶೆಟ್ಟಿ ಮೊದಲಾದವರು ಮುಖ್ಯ ಅತಿಥಿಗಳಾಗಿದ್ದರು.
ಸಮಿತಿ ಸಂಚಾಲಕ ನಂದಕಿಶೋರ್ ವಂದಿಸಿದರು. ತೇಜೇಶ್ ಬಂಗೇರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
